Sunday 26 March 2017

ಚಿಕ್ಕಮಗಳೂರಿನ ಅನುವನಹಳ್ಳಿಯಲ್ಲಿರುವ ಶಾಸನ ಮತ್ತು ಅದರಲ್ಲಿರುವ ಮಾಹಿತಿ

ಅನುವನಹಳ್ಳಿಯ ಬಗೆಗಿನ ನನ್ನ ಬರವಣಿಗೆಯಲ್ಲಿ, ಅಲ್ಲಿ ಸಿಕ್ಕಿರುವ ಶಾಸನದ ಬಗ್ಗೆ ಬರೆದಿದ್ದೆ. ಆದರೆ ಶಾಸನದ ಬಗ್ಗೆ ಹೆಚ್ಚು ಸೇರಿಸಲು ಆಗಿರಲಿಲ್ಲ. ಹಾಗಾಗಿ ಈ ಬರಹ.

ಮಯ್ಸೂರು ಸಂಸ್ತಾನದ ಪುರಾತತ್ವ ಶಾಸ್ತ್ರ (ಪಳಮೆಯರಿಮೆ) ಸಂಶೋಧನ ನಿರ್ದೇಶಕರಾಗಿದ್ದ, ಬಿ ಎಲ್ ರೈಸ್ ಅವರಿಂದ ಸಂಶೋಧನೆಗೊಂಡು, 1901ರಲ್ಲಿ ಮುದ್ರಣವಾದ, ಈ ಎಪಿಗ್ರಾಫಿಯಾ ಕಾರ್ನಾಟಿಕ ಎಂಬ ಹೊತ್ತಗೆಯಿಂದ ಈ ಶಾಸನ ಪಾಠವನ್ನ ಹೆಕ್ಕಿದ್ದೇನೆ.




ಶಾಸನದ ಪಾಠವನ್ನು ಇಂಗ್ಲೀಶ್ ಲಿಪಿಯಲ್ಲಿ ಬಿ ಎಲ್ ರೈಸ್ ಅವರು ನಮಗೆ ಕೊಟ್ಟಿದ್ದಾರೆ. ಇದನ್ನ ನಾನು ಹೊಸಗನ್ನಡ ಲಿಪಿಗೆ ಮಾರ್ಪಡಿಸಿ ಈ ಬ್ಲಾಗಿನಲ್ಲಿ ಹಾಕ್ತಾ ಇದ್ದೀನಿ. ಮತ್ತು ಈ ಶಾಸನದ ಪಾಠದ ಬಗ್ಗೆ ನನ್ನ ಅನಿಸಿಕೆಯನ್ನು ಬರಿತಾಯಿದೀನಿ.



ಶಾಸನದ ಕನ್ನಡದ ರೂಪ :

ಶಾಸನ "ನಮಸ್ ತುಂಗ" ಎಂದು ಶಿವನಿಗೆ ನಮಿಸುವುದರ ಮೂಲಕ ಶುರುವಾಗುತ್ತೆ. ಬಾಣನ "ಹರ್ಷ ಚರಿತೆ" ಯ ಮೊದಲ ಶ್ಲೋಕ ಈ ಪದಗುಚ್ಚದ ಮೂಲ.  ಬಾಣನ ಎಲ್ಲ ಕೃತಿಗಳೂ ಈ ಶಿವನ ಸ್ತುತಿಯಿಂದ ಮೊದಲಾಗುತ್ತೆ.  ಕಾಳಿದಾಸ, ಉದ್ಘಟಯ್ಯ, ಮಯೂರ, ಹಲಾಯುಧ ರಂತ ದೊಡ್ಡ ಶಿವ ಕವಿಗಳ ಸಾಲಿನಲ್ಲಿ ನಿಲ್ಲುವವನು ಈ ಬಾಣ. ಹರಿಹರನೂ ಸೇರಿದಂತೆ ಕನ್ನಡದ ಅನೇಕ ಮಹಾಕವಿಗಳಿಗೆ ಮತ್ತೆ ಮತ್ತೆ ನೆನಪಾದವನು.

ಬಾಣನ ಆ ಶಿವ ಸ್ತುತಿಯ ಪೂರ್ಣ ಶ್ಲೋಕ ಕೆಳಗಿನಂತಿದೆ.  
ನಮಸ್ ತುಂಗ ಶಿರಸ್ ಚುಂಬಿ ಚಂದ್ರ ಚಾಮರ ಚಾರವೇ |
ತ್ರೈಲೋಕ್ಯ ನಗಾರಾರಂಭ ಮೂಲ ಸ್ತಂಬಾಯ ಶಂಬವೇ ||


ಶಾಸನದ ಮೊದಲ ಭಾಗ :
ಸ್ವಸ್ತಿ, ಸಮಧಿಗತ ಪಂಚ ಮಹಾಶಬ್ದ, ಮಹಾಮಂಡಲೇಶ್ವರಂ, ದ್ವಾರಾವತಿ ಪುರವರಾದೀಶ್ವರಂ, ಯಾದವ ಕುಲಂಬರ ದ್ಯುಮಣಿ ಸಂಯುಕ್ತವ ಚೂಡಾಮಣಿ ಮಲಪರೋಳ್ ಗಂಡ, ಮಲಪರೋಳ್ ಗಂಡೆದೆಯನೇಕ ನಾಮಾವಳಿ ಸಮಾಲಂಕೃತರ್ ಅಪ್ಪ ಶ್ರೀಮತ್ ಮಹಾಮಂಡಲೇಶ್ವರಂ ತ್ರಿಭುವನ ಮಲ್ಲ ಹೊಯ್ಸಳ ದೇವರು ಗಂಗವಾಡಿ ತೊಂಭತ್ತಾರು ಸಾಸಿರಮಂ ದುಷ್ಟ ನಿಗ್ರಹ ಶಿಷ್ಟ ಪ್ರತಿಪಾಲನದಿಂ ಆ ಚಂದ್ರಾರ್ಕ ತಾರಾಂಬರಮ್ ರಾಜ್ಯಂ ಸಲ್ಲುತಂ ಇರೆ||

ಪ್ರತಿ ಪದದ ಅರ್ಥ:
ಸ್ವಸ್ತಿ:        ಸ್ವ + ಅಸ್ತಿ : condition of well-being :
ಸಮಧಿಗತ ಪಂಚ ಮಹಾಶಬ್ದ:         one who has obtained the five great sounds : ನಮ: ಶಿವಾಯ ಅನ್ನುವ ಪಂಚಾಕ್ಷರಿ ಮಂತ್ರವನ್ನ ಒಲಿಸಿಕೊಂಡಿರುವವನು.
ಮಹಾಮಂಡಲೇಶ್ವರಂ:        ಮಹಾ ಮಂಡಲ ಈಶ್ವರಂ : Emperor, ಮಹಾ ರಾಜನು
ದ್ವಾರಾವತಿ ಪುರವರಾದೀಶ್ವರಂ :       Lord of the good city of dvaravati, ದ್ವಾರಾವತಿ ಎಂಬ ಪುರಕ್ಕೆ ಒಡೆಯನು
ಯಾದವ ಕುಲಂಬರ ದ್ಯುಮಣಿ:       sun in the sky of yadava clan,  ಯಾದವ ಕುಲವೆಂಬ ಬಾನಿನ ಭಾನು / ಯಾದವ ಕುಲದ ಸೂರ್ಯನು
ಸಂಯುಕ್ತವ ಚೂಡಾಮಣಿ :        A perfect head jewel
ಮಲಪರೋಳ್ ಗಂಡ :         champion over the Malapas
ಅನೇಕ ನಾಮಾವಳಿ ಸಮಾಲಂಕೃತರ್ :       Adorned with these and many other titles, ಅನೇಕ ಬಿರಿದುಗಳಿಂದ ಅಲಂಕೃತನಾದವನು
ಗಂಗವಾಡಿ ತೊಂಭತ್ತಾರು ಸಾಸಿರಮಂ:         having with great glory made the Gangavadi's ninety six thousand obedient to his sword, ಗಂಗವಾಡಿಯ ತೊಂಬ್ತಾರು ಸಾವಿರ ಜನರ ನಿಷ್ಠೆ ಗಳಿಸಿದ್ದ
ದುಷ್ಟ ನಿಗ್ರಹ ಶಿಷ್ಟ ಪ್ರತಿಪಾಲನದಿಂ ಆ ಚಂದ್ರಾರ್ಕ ತಾರಾಂಬರಮ್ ರಾಜ್ಯಂ ಸಲ್ಲುತಂ ಇರೆ:          ಶಿಷ್ಟ ಪರಿಪಾಲನೆ ಮತ್ತು ದುಷ್ಟ ನಿಗ್ರಹದಿಂದ, ಸೂರ್ಯ ಚಂದ್ರ ತಾರೆ ಆಕಾಶದವರೆಗೆ ರಾಜ್ಯ ಪಾಲನೆ ಮಾಡುತ್ತಾ ಇರುವ


ಶಾಸನದ ಎರಡನೆಯ ಭಾಗ :
ಸ್ವಸ್ತಿ ಸತ್ಯವಾಕ್ಯ ಕೊಂಗುಣಿವರ್ಮ, ಧರ್ಮ ಮಹಾರಾಜಾಧಿರಾಜ, ವಂದಿ ಜನ ಕಲ್ಪ ಭುಜ ಕೊಳಲಪುರವರಾಧೀಶ್ವರ, ಪ್ರಥಮ ಮಹೇಶ್ವರ, ನಂದಗಿರಿನಾಥ, ಮನುಜ ಮಾಂದಾತ, ನನ್ನಿಯ ಗಂಗ,  ಜಯದ್ಉತ್ತರಾಂಗ, ಮದಗಜೇಂದ್ರ ಲಾಂಚನ,   ವಿನಿಯೋಗ ಕಾಂಚನ, ಪದ್ಮಾವತಿ ದೇವಿ ಲಬ್ದ ವರಪ್ರಸಾದ ಮೃಗೋಮದಾಮೋದ ರಿಪು ನಿವಾಹ ಕಂಜ ವನ ಕುಂಜರ,   ಗಂಗಕುಲಕಮಲಾಮಾರ್ತಾಂಡ  ಅನಿಯೋಡೆ ಗಂಡ ಕೋದಂಡ ಪಾರ್ಥ ರಣರಂಗ, ಧೀರ ಬಿಲ್ಲಾಂಕಕಾರ, ಪರಮಂಡಲ ಸುರೆಕಾರ, ಈಶ್ವಾರಾದಿತ್ಯ ಕಣ್ಣಅಂಬಿನಾತ, ಆಹ್ವ ಜತ್ತಳಟ್ಟ ವೈರಿಗರಟ್ಟ, ಶರಣಾಗತ ವಜ್ರ ಪಂಜರ, ವೈರಿ ದಿಕ್ ಕುಂಜರ, ಕ್ಷತ್ರಿಯ ಪವಿತ್ರ ಮನುಜ ಮಾಂಧಾತ, ಪರಬಲಾ ಭಯಂಕರ,  ಸತ್ಯ ರತ್ನಾಕರ ಬಂಟರ ಬಾವಾ, ಮರೆವುಗೆ ಕಾವ, ತಪ್ಪೆ ತಪ್ಪುವರ ನಾಮದಿ ಸಮಸ್ತ ಪ್ರಶಸ್ತಿ ಸಹಿತ, ಶ್ರೀ ಮಹಾಮಂಡಲಿಕ ವೈಜರಸರು ಆಸಂದಿಯ ನೆಲೆವೀಡಾಗಿ ಸುಖಸಂಕಟ ವಿನೋದದಿಂ ರಾಜ್ಯಂ ಗೆಯ್ಯುತಂ ಇರೆ ||

ವಿವರಣೆ:
ಕೊಂಗುಣಿ ವರ್ಮ ಗಂಗ ರ ಮೂಲ ಪುರುಷ.  ಸತ್ಯವಾಕ್ಯ, 'ಧರ್ಮ ಮಹಾರಾಜಾಧಿರಾಜ' ಮುಂತಾದವೆಲ್ಲ ಈತನ ಬಿರುದುಗಳು."ನನ್ನಿಯ ಗಂಗ" ಎನ್ನುವ ಬಿರುದು ಈತ ಗಂಗದೊರೆ ಅನ್ನುವದನ್ನ ಊಹಿಸಲು ಸಹಾಯಕ್ಕೆ ಬರುತ್ತೆ,
ವೈಜರಸ ಎಂಬುವವನು ಆಸಂದಿಯನ್ನು ನೆಲೆಬೀಡಾಗಿ ಮಾಡಿ ಕೊಂಡು, ಕೊಂಗುಣಿವರ್ಮನ ಕೆಳಗೆ ಮಹಾ ಮಂಡಲೀಕನಾಗಿ ರಾಜ್ಯಭಾರ ಮಡುತ್ತಿದ್ದವ.


ಶಾಸನದ ಮೂರನೆಯ ಭಾಗ : 
ಸ್ವಸ್ತಿ ಸಮಸ್ತ ಗುಣಸಂಪನ್ನ, ನುಡಿದು ಮತ್ತೆನ್ನಮ್ ಗೋತ್ರಪವಿತ್ರಂ, ಪರಾಂಗಣ ಪುತ್ರ,  ಸತ್ಯ ರತ್ನಾಕರ, ಕೂಡಿ ಕೂಟಕೆ ತಪ್ಪುವರ ಗಂಡ, ಹೆರಗೆ ಹಳಿವರ ಗಂಡ, ಶಿವಪದಶೇಖರ ಶ್ರೀಮಾತು ಕಾಳಗೌಡನ ಮದವಳಿಗೆ ಕಾಲಗೌಡಿ ಇವರ ಸುಪುತ್ರ ಕೊಲದೀಪಕ, ಸತ್ಯರಾಧೇಯ ನುಡಿದಂತೆ, ಗಂಡ ಶ್ರೀಮಾತು ಆಳಗೌಡನ ಮದವಳಿಗೆ ದುಗ್ಗಗೌಡಿಯರು ಬಂದು ಬೇಡಿದಡ್ ಇಲ್ಲನಲು, ಆಗೌಡನ ಮಗ ಕಾಳಗೌಡ ಗೋತ್ರ ಕುಲತಿಲಕ, ಹಿರಿಯ ಬೈಲಾಲು ಕಂಡುಗ 2 ಇನಿಸುವಂ ಆಳಗೌಡನ ಮಗಂ ಕಾಲಗೌಡನು ತಂದೆಯೂ ಮಗನೂ ಇಬ್ಬರು೦ವಿದ್ದು, ಕಾಲ ಕಚ್ಚಿ ದಾರ ಪೂರ್ವ ಮಾಡಿದರು. ಅಮೃತ ಶಕ್ತಿ ಪಂಡಿತರಿಗೆ
ಸ್ವಸ್ತಿ ಶ್ರೀಮತ್  ಚಾಲುಕ್ಯ ಚಕ್ರವರ್ತಿ ಜಗದೇಕಮಲ್ಲ ಆಳ್ವಿಕೆಯ ೩ನೇ ವರ್ಷದ, ಶುಕ್ಲ ಸಂವತ್ಸರದ ಫಾಲ್ಗುಣ ಶುಧ್ಧ ಪುಣ್ಣಮಿ ಸೋಮವಾರದಂದು ಬಿಟ್ಟರು |

ವಿವರಣೆ:
ಕಾಳ ಗೌಡನನ್ನು ಅವನಿಗಿದ್ದ ಬಿರುದುಬಾವಲಿಗಳ ಜೊತೆ ಪರಿಚಯ ಮಾಡಿಕೊಡಲಾಗಿದೆ. ಕಾಳಗೌಡ ಮತ್ತು ಕಾಳ ಗೌಡಿ ಯರ ಮಗ ಆಳ ಗೌಡ. ಈ ಆಳಗೌಡ ಮತ್ತವನ ಹೆಂಡತಿಯ ಮಗನೇ ಮೇಲಿನ ಎಲ್ಲ ಬಿರುಗಳನ್ನು ಹೊಂದಿರುವವ. ಆಳಗೌಡ ಮತ್ತವನ ಮಗ ಕಾಲ ಗೌಡರು ಇಬ್ಬರೂ ಇದ್ದು ದಾರೆ ಎರೆದು ದಾನ ಮಾಡಿ ಕೊಟ್ಟರು ಅನ್ನುವ ಬಿವರಣೆ ಇಲ್ಲಿದೆ. ಇದು ಚಾಲುಕ್ಯ ಚಕ್ರವರ್ತಿ ಜಗದೇಕಮಲ್ಲನ ಆಳ್ವಿಕೆಯ ಮೂರನೇ ವರ್ಷದಲ್ಲಿ, ಶುಕ್ಲ ಸಂವತ್ಸರ, ಪಾಲ್ಗುಣ ಶುದ್ದ ಹುಣ್ಣಿಮೆ ಯಾ ಸೋಮವಾರದಂದು ದಾರೆ ಎರೆದು ಕೊಟ್ಟರು / ದಾನಕ್ಕೆ ಬಿಟ್ಟರು.    

ಶಾಸನದ ಕೊನೆಯ ಭಾಗ : 
ತುಂಬಿನ ಗದ್ದೆ, ಬಾಗೆಯ ಕೆರೆಯ ಕಂಡುಗ, ಹಿರಿಯ ಕೆರೆಯ ಕೆಳಗೆ ಹತ್ತು ಕೊಳಗ,  ಹೆಗ್ಗಡೆ- ರಾಚಿಮಯ್ಯನು, ಆಳಗೌಡನು ಇಬ್ಬರುಂ ವಿದ್ದು ಬಿಟ್ಟರು. ಕೇತೋಜನ ಪುತ್ರ ದೇಕೋಜಗೆ ಬಿಟ್ಟರು.

ವಿವರಣೆ:
ಹೆಗ್ಗಡೆ ರಾಚಿಮಯ್ಯ ಮತ್ತು ಆಳಗೌಡ ಇಬ್ಬರೂ ಇದ್ದು, ತುಂಬಿನ ಗದ್ದೆ, ಬಾಗೆಯ ಕೆರೆ ಬದಿಯ ಕಂಡುಗ ಹೊಲ,  ಹಿರಿ ಕೆರೆಯ ಕೆಳಗಿನ ಹತ್ತು ಕೊಳಗದಷ್ಟು ಹೊಲವನ್ನು, ಕೇತೋಜನ ಮಗ ದೇಕೋಜನಿಗೆ, ದಾರೆ ಎರೆದು ಬಿಟ್ಟು ಕೊಟ್ಟರು.


ಸಾರಾಂಶ: 
  • ಇದೊಂದು ದತ್ತಿ ಶಾಸನ. 
  • ಈ ಶಾಸನದ ಆರಂಭವು 'ನಮಸ್ತುಂಗ' ಎಂಬ ಶಿವ ಸ್ತುತಿ ಮೂಲಕ ಆರಂಭವಾಗುತ್ತದೆ. ಇಲ್ಲಿ ಶಿವ ಭಕ್ತರ ಪ್ರಭಾವ ಹೆಚ್ಚಿತ್ತೆಂದು ತಿಳಿಯಬಹುದು. ಆ ಶಾಸನದ ಮೇಲ್ಭಾಗದಲ್ಲೂ ಕೂಡ ನಾವು ಶಿವಲಿಂಗವನ್ನು  ಮತ್ತು ಅದಕ್ಕೆ ನಮಿಸುತ್ತಿರುವ ಗೋವು ಮತ್ತು ಮನುಷ್ಯನ ಆಕೃತಿಯನ್ನು ಕಾಣಬಹುದಾಗಿದೆ.
  • ಇನ್ನು ಶಾಸನದ ಪೀಠಿಕೆಯಲ್ಲಿ ಗಂಗರ ಮೂಲ ಪುರುಷ ಕೊಂಗುಣಿ ವರ್ಮನ ಉಲ್ಲೇಖವಿದೆ. ಈತ ಈ ಭಾಗದ ಸಾಮಂತ ರಾಜನಾಗಿದ್ದರಬಹುದು. 
  • ಆಸಂದಿಯಿಂದ ಆಳುತ್ತಿದ್ದ ಮಹಾ ಮಂಡಳೀಕ ವೈಜರಸನ ಉಲ್ಲೇಖವಿದೆ. ಇಡೀ ರಾಜ್ಯವನ್ನು ಹಲವು ಮಂಡಲಗಳಾಗಿ ವಿಭಾಗ ಮಾಡಿ ಆಳ್ವಿಕೆ ಮಾಡಲಾಗುತ್ತಿತ್ತು ಎನ್ನುವುದು ತಿಳಿಯುತ್ತೆ. 
  • ಚಾಲುಕ್ಯ ರಾಜ ಜಗದೇಕಮಲ್ಲನ  ಹಲವು ನಾಮಾವಳಿಗಳಿಂದ ಹೊಗಳಿರುವುದನ್ನು ಗುರುತಿಸಲಾಗಿದೆ. ಇವನು ಆ ಪ್ರದೇಶಕ್ಕೆ ಚಕ್ರವರ್ತಿಯಾಗಿದ್ದ ಎಂದೆನಿಸುತ್ತದೆ.
  • ಆಳ ಗೌಡ ಮತ್ತು ಕಾಳ ಗೌಡರು ದಾರೆ ಎರೆದು ಕೊಡುವ ಉಲ್ಲೇಖವಿದೆ. ಇವರು ಊರ ಆಳ್ವಿಕೆ ಮಾಡುತ್ತಿದ್ದ (ಗೌಡಿಕೆ)ವರಿರಬೇಕು.
  • ದಾನ ಪಡೆಯುವ ಕೇತೋಜ ಮತ್ತು ದೇಕೋಜ ಹೆಸರುಗಳು ಈ ಪ್ರದೇಶದಲ್ಲಿ ಈಗಂತೂ ಬಳಕೆಯಲ್ಲಿಲ್ಲ.  ಅಲ್ಲಿ ಅತಿ ಪ್ರಮುಖವಾಗಿರುವ ಶೈವ ಸಂಪ್ರದಾಯಕ್ಕೆ ಹೊರಗಿನ ಹೆಸರುಗಳಂತೆ ಕಾಣುತ್ತಿವೆ. 
  • ಶಾಸನದ  ಬಿರುದಿನ ಭಾಗ ಸಂಸ್ಕತಮಯಾಗಿದ್ದರೆ, ಶಾಸನನ ಮುಖ್ಯ ಭಾಗ ಕನ್ನಡಮಯವಾಗಿದೆ. ಆಡುಗನ್ನಡಲ್ಲಿದೆ 
  • ಕಂಡುಗ, ಕೊಳಗ ಮುಂತಾದ ನೆಲದ ವಿಸ್ತೀರ್ಣವನ್ನ ಅಳೆಯುವ ಯುನಿಟ್ ಗಳ  ಉಲ್ಲೇಖವಿವೆ. 
  • ಇಲ್ಲಿ ಎರೆಡು ಕೆರೆಗಳ ಉಲ್ಲೇಖವಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಈ ಊರಿನಲ್ಲಿರುವುದು  ಒಂದೇ ಕೆರೆ.  


2 comments: