Monday 29 February 2016

ಸ್ವರ್ಣ ಬಿಂದು ಪ್ರಾಶನ ಮಕ್ಕಳಿಗೆ ಅದು ಅಮೃತಾನ? / ವಿಷಾನ?

ಸ್ವರ್ಣ ಬಿಂದು ಪ್ರಾಶನ  ಮಕ್ಕಳಿಗೆ   ಅಮೃತಾನ????  / ವಿಷಾನ????????
ಇತ್ತೀಚೆಗೆ ನಗರ ಪ್ರದೇಶಗಳಲ್ಲಿ ಹೆಚ್ಚಾಗುತ್ತಿರುವ  ಸ್ವರ್ಣ ಬಿಂದು ಪ್ರಾಶನ ಹನಿಗಳನ್ನು ಮಕ್ಕಳಿಗೆ  ಹಾಕುವ ಹಾಸ್ಪಿಟಲ್ ಮತ್ತು ಬ್ಯಾನರ್ಗಳು ನನ್ನ ತಲೆಗೆ ತುಂಬಾ ಕೆಲಸ ಕೊಟ್ಟಿವೆ. ಇದು ಸರಿನೋ?  ತಪ್ಪೋ?  ಅಂತ ನನ್ನ ಮನಸ್ಸಿನಲ್ಲಿ ಗೊಂದಲದ ಪ್ರಶ್ನೆಗಳು ಮೂಡುತ್ತಿವೆ. ಇದನ್ನು ಹುಟ್ಟಿದ ಮಗುವಿನಿಂದ 16 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪುಷ್ಯ ನಕ್ಷತ್ರದಂದು ಹಾಕಿಸುವುದು. ನಾನು ಕೂಡ ಒಂದೆರೆಡು ಬಾರಿ ಹಾಕಿಸಿದೆ. ಅದಕ್ಕೆ ಕಾರಣ ಬೌಧ್ಧಿಕ ಶಕ್ತಿ ಹೆಚ್ಚಿಸಲು, ಜ್ಞಾಪಕಶಕ್ತಿ, ಮಕ್ಕಳಿಗೆ ತಂತಾನೆ ರೋಗನಿರೋಧಕ ಶಕ್ತಿ ದೇಹ ಬೆಳೆಸಿಕೊಳ್ಳುತ್ತದೆ ಎಂದೂ  ಮತ್ತು ಕೆಲವೊಂದು ಇನ್ಫೆಕ್ಷನ್ ನಿಂದ ಮಕ್ಕಳಿಗೆ ಪ್ರೊಟೆಕ್ಷನ್ ಇದರಿಂದ ಬರುತ್ತೆ  ಎಂದು,  ನನ್ನ ಗೆಳತಿಯರೆಲ್ಲ ಹೇಳುತ್ತಿದ್ದರು. ಕೆಲವೊಂದು ಪಾಂಪ್ಲೆಟ್ಗಳಲ್ಲಿ ಓದಿದ್ದು, ಮತ್ತು ನನ್ನ ಕೆಲವು ಗೆಳತಿಯರ ಸಲಹೆಯ ಮೇರೆಗೆ, ಇಂಟರ್ನೆಟ್ನಲ್ಲಿ ಅದರ ಬಗ್ಗೆ ಇದ್ದ ಮಾಹಿತಿಗಳನ್ನು  ಓದಿ ನಾನು ಸ್ವರ್ಣ ಬಿಂದುವನ್ನು ನನ್ನ ಮಕ್ಕಳಿಗೂ ಹಾಕಿಸಬೇಕೆಂಬ ನಿರ್ಧಾರ ಮಾಡಿ ಎರೆಡು ಬಾರಿ ಹಾಕಿಸಿದ್ದು ಆಯಿತು. ಯಾಕೋ ಕೆಲವೊಮ್ಮೆ ಇದರ ಬಗ್ಗೆ ಆಳವಾಗಿ ಯೋಚಿಸಿದಾಗ ಇದು ಸರಿನೋ? ತಪ್ಪೋ?  ಅನ್ನೋ ಗೊಂದಲಗಳು ಮನಸ್ಸಿನಲ್ಲಿ ಯಾವಾಗಲೂ ಕಾಯಿಕೊರಕ ಹುಳುವಿನಂತೆ ನಂತಲೆ ಕೊರಿತನೆ ಇರುತ್ತೆ.  ಅದಕ್ಕೆ ಇದರ ಅರ್ಥ ಪೂರ್ಣ ಮಾಹಿತಿ ತಿಳಿಯಲೆಬೇಕೆಂಬ ಕುತೂಹಲ ಹೊಂದಿರುವ ತಾಯಿಯಾಗಿ ಮತ್ತು ಎಲ್ಲ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಈ ಆರ್ಟಿಕಲ್ ಬರೀತಿದೀನಿ. ಅಮೃತವು ಅತಿಯಾದರೆ ವಿಷವಗುತ್ತೆ ಅನ್ನೋದು ಕೂಡ ಒಂದು ವಾಡಿಕೆ. ಅದೂ ಅಲ್ಲದೆ ಈ ಸ್ವರ್ಣ ಬಿಂದು ಪ್ರಾಶನ ನಮ್ಮ ದೇಶದಲ್ಲಿ ಬಿಟ್ಟರೆ ಬೇರೆ ಯಾವ ದೇಶದ ಮೆಡಿಕಲ್ ಪಧ್ಧತಿಯಲ್ಲೂ ಇದು ಅಂಗೀಕಾರವಾಗಿಲ್ಲ. ಆದ್ದರಿಂದ ಇದು ದುಡ್ಡು ಮಾಡೋ ಜನರ ಇನ್ನೊಂದು ತಂತ್ರವಾ ಎಂದೂ ಒಮ್ಮೊಮ್ಮೆ ಅನಿಸುತ್ತದೆ. ಆರೋಗ್ಯವಂತ ಮಕ್ಕಳೇ ತಾನೆ ನಮ್ಮ ದೇಶದ ಶಕ್ತಿ.




ಸ್ವರ್ಣ ಬಿಂದು ಪ್ರಾಶನ  ಹಾಕಿಸುವುದರಿಂದ ಒಳ್ಳೆಯದಾಗದಿದ್ದರೂ ಪರವಾಗಿಲ್ಲ, ನಮ್ಮ ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಆಗಬಾರದು ಎನ್ನುವುದು ನನ್ನ ಆಶಯ. ಕೆಲವೊಂದು ಫ್ರೆಂಡ್ಸ್ ಗಳ ಜೊತೆ ಈ ಬಗ್ಗೆ ಮಾತು ಕಥೆ ನಡೆಸಿದಾಗ ಇದು ಆಯುರ್ವೇದ ಟೆಕ್ನಿಕ್ ಯಾವುದೇ ಕೆಮಿಕಲ್ ಬಳಸಲ್ಲ ನ್ಯಾಚುರಲ್ ಆಗೇ ಮಾಡಿರುತ್ತಾರೆ. ದೇಹಕ್ಕೆ ಬೇಡ ಎನಿಸಿದರೆ ಅದೇ ಹೊರ ಹಾಕುತ್ತೆ ಬಿಡು, ಎಂದು ಹಲವರು ಹೇಳಿದ್ದು ಕೇಳಿ ನಿಟ್ಟುಸಿರು ಬಿಟ್ಟಿದ್ದೆ.  ಆಗ ನಾನೇನೂ  ತಪ್ಪು ಮಾಡಿಲ್ಲ ,ಅದು ಸರಿ ಅಂತ ಅನ್ನುಸ್ತು.

ಸ್ವರ್ಣ ಬಿಂದು ಪ್ರಾಶನದ ಬಗ್ಗೆ ಇಂಟರ್ನೆಟ್ ನಲ್ಲಿ ನಾನು ಓದಿದ ಮಾಹಿತಿ----
ಕಶ್ಯಪ ಮತ್ತು ವಾಗಭಟ  ಮುನಿಗಳು ತಮ್ಮ ಶ್ಲೋಕಗಳಲ್ಲಿ  ಚಿನ್ನದ ಭಸ್ಮದ ಬಗ್ಗೆ, ಚಿನ್ನದ ಅಂಶದ ಮಹತ್ವದ ಬಗ್ಗೆ   ತಮ್ಮ ಶ್ಲೋಕಗಳಲ್ಲಿ  ಹೀಗೆ ಹೇಳಿದ್ದಾರೆ.

1. ವಾಗ್ ಭಟ- ರವರ, ಅಷ್ಟಾಂಗ ಹೃದಯಂ ನ 7ನೇ  ಪಾಠದಲ್ಲಿ  ಹೀಗೆ ಹೇಳಿದ್ದಾರೆ. " ನ ಸಜ್ಜತೆ ಹೇಮಪಂಗೆ ಪದ್ಮಪತ್ರೆ ಅಂಬುವತ್ ವಿಶ0 || " -ಇದರ ಅರ್ಥ ವಿವರಣೆ ಹೀಗಿತ್ತು - ಯಾವುದೇ ವ್ಯಕ್ತಿ ಚಿನ್ನದ ಭಸ್ಮ ತುಂಬಾ ದಿನಗಳವರೆಗೆ ಸೇವಿಸುತ್ತನೋ  ಅವನಿಗೆ  ವಿಷವು ಕೂಡ  ಕೆಡುಕು ಮಾಡುವುದಿಲ್ಲ. ಅದು ಹೇಗೆಂದರೆ ತಾವರೆ ಎಲೆ ಹೇಗೆ ನೀರು ಅಂಟಿಕೊಳ್ಳದಂತೆ  ಸುರಕ್ಷಿತವಾಗಿರುತ್ತೋ  ಹಾಗೆ ಆತನನ್ನು ಕಾಪಾಡುತ್ತದೆ. ಆ ವ್ಯಕ್ತಿ ದೀರ್ಘಾಯು ಹೊಂದುತ್ತಾನೆ.

2. ಕಷ್ಯಪಾಚಾರ್ಯ- ರ (ಕಶ್ಯಪ ಸಂಹಿತ, ಸೂತ್ರಸ್ಥಾನಮ್ ) ನಲ್ಲಿ ಹೀಗೆ ಇದೆ. 
ಸುವರ್ಣ ಪ್ರಾಶನಂ ಹಿ ಏತತ್ ಮೇಧಾಗ್ನಿ ಬಲ ವರ್ಧನಂ | ಆಯುಷ್ಯಂ ಮಂಗಲಂ ಪುಣ್ಯಂ ವೃಶ್ಯಾಂ  ಗ್ರಹಾಪಹಂ || ಮಾಸಾತ್ ಪರಂ ಮೇಧಾವೀ ವ್ಯಾಧಿಭಿರ್ನ್ ಚ ದೃಷ್ಯತೆ | ಷಢಭಿ ಮಾಸೈ ಶ್ರುತಧರ್  ಸುವರ್ಣ ಪ್ರಾಶನಾತ್ ಭವೇತ್ || -ಇದರ ಅರ್ಥ ಸುವರ್ಣಬಿಂದು ಪ್ರಾಶನ ಮನುಷ್ಯನನ್ನು ಮೇಧಾವಿಯನ್ನಾಗಿಸುತ್ತದೆ. ಜೀರ್ಣಶಕ್ತಿ ಉತ್ತಮಗೊಳ್ಳುತ್ತದೆ. ಪ್ರತಿ ತಿಂಗಳು ತೆಗೆದುಕೊಂಡರೆ ರೋಗ ನಿರೋಧಕ ಶಕ್ತಿ ಬರುತ್ತೆ. ಕೆಟ್ಟ ಅಂಶಗಳು ಹೊರಹೋಗುತ್ತವೆ. 6 ತಿಂಗಳುಗಳ ಕಾಲ ಮಗುವಿಗೆ ಪ್ರತಿದಿನ  ಹಾಕಿಸಿದರೆ  ಮಗುವಿಗೆ ಕೇಳಿಸಿಕೊಳ್ಳುವ ಮತ್ತು ಕೇಳಿಸಿಕೊಂಡಿದ್ದನ್ನು ನೆನಪಿಟ್ಟುಕೊಳ್ಳುವ ಶಕ್ತಿ ವೃಧ್ಧಿ ಯಾಗುತ್ತದೆ.


ಇದನ್ನು ಓದಿದ ಮೇಲೂ ನನ್ನ ಮನಸ್ಸಿನ ಗೊಂದಲಗಳು ಕಡಿಮೆಯಾಗಲಿಲ್ಲ. ಇದನ್ನು ಚರ್ಚಿಸಲು ನನಗೆ ಹೊಳೆದ ವ್ಯಕ್ತಿ ನನ್ನ ನಾದಿನಿ, ಅವಳ  ಗಂಡ ಡಾಕ್ಟರ ಆಗಿದ್ದು, MD ಮಾಡುತ್ತಿದ್ದಾರೆ. ಅವರಿಗೂ ಒಂದು ಮಗು ಇದೆ. ನೋಡೋಣ ಅವರು ಹಾಕಿಸುತ್ತಿದ್ದಾರ ಎಂದು ಅವಳನ್ನು ಸ್ವರ್ಣ ಬಿಂದು ಪ್ರಾಶನ ನಿನ್ನ ಮಗಳಿಗೆ ಹಾಕಿಸುತ್ತೀಯಾ?  ಎಂದು ಕೇಳಿದೆ. ಅವಳಿಗೆ ಅದೇನು ಅಂತಾನು ಗೊತ್ತಿಲ್ಲ!!!!!! ನಮ್ಮ ಮನೆವ್ರನ್ನ ಕೇಳಿ ಹೇಳ್ತೀನಿ ಅಂತ ಹೇಳಿದಳು. ಮಾರನೇ ದಿನ ಆಕೆಯ ಕಾಲ್ ಬಂತು. ಆಕೆಯ ಡಾಕ್ಟರ್ ಗಂಡ  ಕೊಟ್ಟ ಉತ್ತರ ಹೀಗಿತ್ತು. ಏನೆಂದರೆ ಕೆಲವೊಂದು ಲೋಹಗಳು ದೇಹಕ್ಕೆ ಬೇಕು ಅದು ಮಿಲಿ ಗ್ರಾಂನಷ್ಟು ಮಾತ್ರ. ಅದು ಅತಿಯಾದರೆ ದೇಹಕ್ಕೆ ಅಪಾಯ ಖಂಡಿತ. ಅವರಿಗೆ ಆಯುರ್ವೇದದಲ್ಲಿ ನಂಬಿಕೆ ಇಲ್ಲವೆಂದು ಮತ್ತು ಹಳೆ ಕಾಲದ ಯಾವುದೊ ಪುಸ್ತಕದಲ್ಲಿ ಬರೆದ ಥಿಯರಿ ಅಥವಾ ಶ್ಲೋಕದಲ್ಲಿರುವುದನ್ನು ಸರಿಯಾಗಿ ಪರೀಕ್ಷಿಸದೆ ಹಾಗೆ ತಂದು ಮೆಡಿಸಿನ್ ಅಂತ ಹೇಳ್ತಾರೆ. ಅದನ್ನ ಓದುವವರು ಕಮ್ಮಿ ಮತ್ತು ಅಲ್ಲಿ ಪ್ರಯೋಗಗಳು ಕೂಡ ಕಮ್ಮಿ, ಆದರೆ ಇಂಗ್ಲಿಷ್ ಮೆಡಿಸಿನ್ನಲ್ಲಿ ರಿಸರ್ಚ್ ಮಾಡುವಸಸ್ಟ ರಿಸರ್ಚ್ ಆಯುರ್ವೇದ ದಲ್ಲಿ ನಡೆಯುವುದಿಲ್ಲ, ಇಂಗ್ಲಿಷ್ ಮೆಡಿಸಿನ್ನಲ್ಲಿ   ಫಂಡ್ ಇದೆ ಸಾಕಸ್ತು ರಿಸರ್ಚ್ ನಡೆದ ನಂತರ ಇಲ್ಲಿ ಯಾವ್ದು ಸರಿ, ಯಾವ್ದು ತಪ್ಪು, ಅಂತ ಇಂಟರ್ನ್ಯಾಷನಲ್ ಲೆವೆಲ್ ನಲ್ಲಿ ಮೆಡಿಕಲ್ ಗೆ ಸಂಬಂಧಿಸಿದ ಸಂಘಟನೆಗಳ ಒಪ್ಪಿಗೆಯ ಮತ್ತು ರಿಸರ್ಚ್ ಆಧಾರಗಳ ಮೇಲೆ ಹೇಳುತ್ತಾರೆ. ಏನಾದರೂ ಸೈಡ್ ಎಫೆಕ್ಟ್ ಆಗುತ್ತೋ ಅದರ ಬಗ್ಗೆ ನಾವು ಪೇಷಂಟ್ಗೆ ತಿಳಿಸುತ್ತೇವೆ. ಸೈಡ್ ಎಫೆಕ್ಟ್  ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸುತ್ತೇವೆ. ಕೆಲವೊಂದು ಮೆಟಲ್ಸ್ ಕೂಡ ಕೆಲವರ ದೇಹಕ್ಕೆ ಅಲರ್ಜಿಕ್ ಆಗಿರುತ್ವೆ ಅಥವಾ ದೇಹದಲ್ಲಿ ಅವುಗಳ ಪ್ರಮಾಣ  ಸಮತೋಲನದಲ್ಲಿರುತ್ತೆ.  ಅವನ್ನು ಪರೀಕ್ಷಿಸಿದ ನಂತರವೇ ಕೊಡಬೇಕು ಇಲ್ಲವಾದಲ್ಲಿ ಈಗ ಇಲ್ಲ ಅಂದ್ರೂ ಫ್ಯೂಚರ್ ನಲ್ಲಿ ಅಪಾಯ ತಪ್ಪಿದ್ದಲ್ಲ. ಸ್ವರ್ಣ ಬಿಂದು ಪ್ರಾಶನದ ಬಗ್ಗೆ ಎಷ್ಟು ರಿಸರ್ಚ್ ಆಗಿದೆ ಅಂತ ತಿಳಿದುಕೊಂಡು ಅದರ ಮೇಲೆ ನಿಮಗೆ ನಂಬಿಕೆ ಬಂದ್ರೆ, ಬೇಕೆನಿಸಿದರೆ ಹಾಕ್ಸಿ ಎಂಬುದು ಅವರ ಹೇಳಿಕೆಯಾಗಿತ್ತು. ಮಕ್ಕಳಿಗೆ ಒಳ್ಳೇ ಆಹಾರ ವನ್ನ ಹೊತ್ತಿಗೆ ಸರಿಯಾಗಿ ಊಟ ಮಾಡ್ಸಿ ,ಊಟದಲ್ಲಿ ಎಲ್ಲಾ ರೀತಿಯ ತರಕಾರಿ, ಬೇಳೆ ,ಹಸಿರು ತರಕಾರಿ ,ತಾಜಾ ಹಣ್ಣು ಹಾಲು  ಇವುಗಳನ್ನ ತಿನ್ನಿಸಿ ಕುಡಿಸಿ, ಸಾಕು. ನಾವು ತಿನ್ನುವ ಆಹಾರದ ಮೂಲಕವೆ ದೇಹಕ್ಕೆ ಬೇಕಾದ ಎಲ್ಲ ಅಂಶಗಳು ಸಿಗುತ್ತವೆ. ಎಂಬುದು ಅವರ ವಿವರಣೆ ಯಾಗಿತ್ತು. ಮಕ್ಕಳು  ಹೆಚ್ಚು ನೀರು ಕುಡಿಯಲು ಪ್ರೇರೇಪಿಸಿ ಎಂದರು.




 ಆದರೂ ನಾನು ಬಿಡದೆ  ನಿಮ್ಮ ಮಗಳಿಗೆ ಸ್ವರ್ಣ ಬಿಂದು ಹಾಕಿಸ್ತೀರಾ  ಅಂತ ಕೇಳಿದ್ರೆ ಅವರಿಗೆ ಆಯುರ್ವೇದ ದಲ್ಲಿ ನಂಬಿಕೆಯಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ರು. ಆಯುರ್ವೇದ ಒಂದು ಮೆಡಿಸಿನ್ ಪದ್ಧತಿ ಅಲ್ಲ ಎನ್ನುವುದು ಅವರ ವಾದವಾಗಿತ್ತು. ಅವರ ಪ್ರಕಾರ ಅಲ್ಲಿ ರಿಸರ್ಚ್ ಕಮ್ಮಿ ಹಳೆ ಪುಸ್ತಕದಲ್ಲಿ ಯಾವ್ದೋ ಒಂದು ಶ್ಲೋಕ ದಲ್ಲಿ ಬರೆದಿರುವುದೇ ಸರಿ ಎಂದು ವಾದ ಮಾಡಿ ನಮ್ಬಿಸ್ತಾರೆ  ಪ್ರಯೋಗಿಸಿ ನೋಡೋ ವ್ಯವಧಾನ ಅಲ್ಲಿಲ್ಲ ಎನುವುದು ಅವರ ವಾದ. ಈ ಮಾತು ಕೇಳಿದಾಗ  ನನಗನ್ನಿಸಿದ್ದು ಹೌದಲ್ವ? ಇವಾಗದ್ರೂ ರಿಸರ್ಚ್ ಮಾಡೋಕೆ ಸಾಕಗುವಸ್ತು ಟೆಕ್ನಾಲಜಿ ಇದೆ. ಆಗಿನಕಾಲದಲ್ಲಿ ಇದರ ಬಗ್ಗೆ ರಿಸರ್ಚ್ ಆಗಿತ್ತ? ಅನ್ನೋ ಇನ್ನೊಂದು ಪ್ರಶ್ನೆ ನನ್ನ ತಲೆಗೆ ಬಂತು.


ಇನ್ನು ಕೆಲವರು ಹೇಳುವ ಹಾಗೆ ತಾಮ್ಬ್ರದ ತಂಬಿಗೆಯಲ್ಲಿ ರಾತ್ರಿ  ನೀರು ತುಂಬಿಸಿ  ಬೆಳಿಗ್ಗೆ ಖಾಲಿ ಹೊಟ್ಟೆಗೆ ಕುಡಿದರೆ ಆರೋಗ್ಯ ಹೆಚ್ಚಾಗುತ್ತೆ ಎಂದು ಹೇಳುತ್ತಾರೆ. ಚಿನ್ನದಂತೆ ಅದು ಕೂಡ ಒಂದು ಲೋಹ ಅದರ  ಬಗ್ಗೆ ತಿಳಿಯೋಣ ವೆನಿಸಿ ಹುಡುಕಾತ್ತಾ ಹೋಗಿ ಇನ್ನೇನೋ ವಿಷಯಗಳು ಕಣ್ಣ ಮುಂದೆ ಬಂದು ನಿಂತವು , ಒಂದು ಕರಾಳ ಇತಿಹಾಸವೇ ಕಣ್ಣಮುಂದೆ ಬಂದು ನಿಲ್ತು. ಅದೇನು ಅಂದ್ರೆ ಹಿಂದಿನ ಕಾಲದಲ್ಲಿ ಒಂದು ರೋಗ ಇತ್ತು. ಹೊಟ್ಟೆ ಡುಮ್ಮ ಕೈ ಕಾಲು ಸಣ್ಣ ಇದನ್ನು ಹೊಟ್ಟೆ ನರಗಟ್ಟು ರೋಗ, ಯಕೃತ್ ರೋಗ, ( Indian childhood syndrome )  ಎಂದೂ ಕರೆಯುತ್ತಿದ್ದರು.ಇದು ಸಾಮಾನ್ಯವಾಗಿ ಮಕ್ಕಳಲ್ಲಿ ಬರುತ್ತಿತ್ತು. ಈ ರೋಗ ಬಂದ್ರೆ ಮಕ್ಕಳು ಸತ್ತೆ ಹೋಗ್ತಿದ್ರು. ಈ ರೋಗದ ಲಕ್ಷಣಗಳು ಕೈ, ಕಾಲು ,ಮುಖ, ತೆಳ್ಳಗೆ ಇದ್ದು ಹೊಟ್ಟೆ ಭಾಗ ಮಾತ್ರ  ದಪ್ಪವಾಗುತ್ತಾ ಗುಂಡಗೆ ಊದಿಕೊಳ್ಳುತಿತ್ತು.  ಜ್ವರ ,ರಕ್ತಹೀನತೆ, ತಿಂದದ್ದು ಮೈಗೆ ಹತ್ತದೆ, ನಂತರ ಕಾಮಾಲೆ ರೋಗ ಬಂದು ಕೋಮ ಸ್ಥಿತಿ ಬಂದು ಮಕ್ಕಳು ಸಾಯುತ್ತಿದ್ದವು. ಇದು ಭಾರತದಲ್ಲಿ ಹೆಚ್ಚಾಗೆ ಕಂಡುಬಂದಿದ್ದರಿಂದ ಇದನ್ನು (Indian childhood syndrome) ಎಂದು ಕರೆಯುತ್ತಿದ್ದರು.

1979 ರಲ್ಲಿ ಇಂಗ್ಲೆಂಡ್ ನಲ್ಲಿ ದೇಹಕ್ಕೆ ಬೇಕಾಗುವ ಲಘು ಪ್ರಮಾಣದ ಖನಿಜಗಳ ಬಗ್ಗೆ ಒಂದು ರಿಸರ್ಚ ನಡೆಯುತ್ತೆ.. ಅವರ ಪ್ರಕಾರ ಅಯೋಡೀನ್(iodine), ಫ್ಲೂರಿನ್(florin), ಮಾಲಿಬ್ದಿನಂ(molybdenum), ಜಿನ್ಕ(Zink), ಕೊಬಾಲ್ಟ್(cobalt), ತಾಮ್ರ(cop  per), ಮ್ಯಾಂಗನೀಸ್(manganese),ಇನ್ನು ಮುಂತಾದವು.  ಈ ಲೋಹಗಳೆಲ್ಲ ನಮ್ಮ ದೇಹಕ್ಕೆ ಮಿಲಿ ಗ್ರಾಂ ಗಳ ಪ್ರಮಾಣದಲ್ಲಿ ಮಾತ್ರ ದೇಹಕ್ಕೆ ಬೇಕು ಇವು ಕಮ್ಮಿಯಾದರೂ ಕಷ್ಟ ,ಹೆಚ್ಚಾದರು ಕಷ್ಟ ಅನ್ನೋ ವಿಷಯವನ್ನು  ತಮ್ಮ ರಿಸರ್ಚ್ ಮೂಲಕ ಜಗತ್ತಿಗೆ ತಿಳಿಸುತ್ತಾರೆ.


ಟ್ಯಾನ್ಸನ್ ಹಾಗು ಪೂಪ್ಪರ್ ಎಂಬ ವೈದ್ಯ ವಿಜ್ಞಾನಿಗಳು ಭಾರತದ ಹೊಟ್ಟೆ ಡುಮ್ಮ ಕೈಕಾಲ್ ಸಣ್ಣ ರೋಗದಿಂದ ಸತ್ತ ಮಕ್ಕಳನ್ನು ಪರೀಕ್ಷಿಸಿದಾಗ  ಅತಿ ಹೆಚ್ಚಿನ ಪ್ರಮಾಣದ ತಾಮ್ರ ಆ ಮಕ್ಕಳ ದೇಹದಲ್ಲಿರುವುದು ತಿಳಿಯುತ್ತದೆ. ಹೊಟ್ಟೆಯಲ್ಲಿ ಮಾತ್ರವಲ್ಲದೆ ರಕ್ತ, ಮೂತ್ರ ,ಉಗುರು, ಕೂದಲಿನಲ್ಲು ತಾಮ್ರದ  ಅಂಶ ಹೆಚ್ಚಾಗಿ ಶೇಖರಣೆಯಾಗಿರುವುದು ತಿಳಿದು ಬರುತ್ತದೆ. ಈ ಮಕ್ಕಳಲ್ಲಿ ತಾಮ್ರ ಅಂಶ ಹೇಗೆ ಸೇರಿತು ಎಂಬದನ್ನು ತಿಳಿಯ ಹೊರಟಾಗ ಸಿಕ್ಕಿದ್ದು ತಾಯಿಯ ಎದೆ ಹಾಲು ಸಾಕಾಗದ ಮಕ್ಕಳಿಗೆ, ಮತ್ತು ಸ್ವಲ್ಪ ದೊಡ್ಡ ಮಕ್ಕಳಿಗೆ  ಹಸು, ಎಮ್ಮೆಯ ಹಾಲು ಒಳ್ಳೆಯದು ಎಂದು ಅದನ್ನು ಬಿಸಿಮಾಡಿ  ಕುಡಿಸುತ್ತಿದ್ದರು. ಆ ಹಾಲು ಕಾಯಿಸುವ ವಸ್ತು ಹಿತ್ತಾಳೆ ಎಂಬ ಮಿಶ್ರ ಲೋಹ ವಾಗಿತ್ತು .ಇದು ಎರೆಡು  ಭಾಗ ತಾಮ್ರ ಒಂದು ಭಾಗ ಸತುವಿನಿಂದ ತಯಾರಾದ ಲೋಹವಾಗಿತ್ತು.. ಹಾಲು ಕಾಯಿಸಿದಾಗ ತಾಮ್ರದ ಅಂಶ ಕರಗಿ ಹಾಲಿನೊಡನೆ ಮಕ್ಕಳ ದೇಹ ಸೇರಿ ಮಕ್ಕಳ ದೇಹದಲ್ಲಿ ಈ ವಿಚಿತ್ರ ರೋಗ ಹುಟ್ಟಲು ಕಾರಣವಾಗಿತ್ತು. ಈ ಅಂಶವು ವಿಜ್ಞಾನಿಗಳ ಮೂಲಕ ಬೆಳಕಿಗೆ ಬಂದು, ದಿನಪತ್ರಿಕೆಗಳಲ್ಲಿ ಈ ಮಾಹಿತಿಯನ್ನು ಹಾಕಲಾಗುತ್ತೆ. ನಂತರ ಹಿತ್ತಾಳೆ ಪಾತ್ರೆಯಲ್ಲಿ ಅಡುಗೆ ಮಾಡುವದನ್ನು ಪೂರ್ತಿಯಾಗಿ ನಿಲ್ಲಿಸಲಾಯಿತು. ಸ್ಟೇನ್ಲೆಸ್ ಸ್ಟೀಲ್ ಮತ್ತು ಮಣ್ಣಿನ ಮಡಿಕೆಗಳನ್ನ  ಅಡುಗೆಗೆ ಬಳಸಲು ಮುಂದಾದರು ಹಾಗೆ ಸಮಾಜದಲ್ಲಿದ್ದ  ಒಂದು ಮಾರಣಾoತಿಕ ಕಾಯಿಲೆ ಸದ್ದಿಲ್ಲದೇ ಯಾವ ಚಿಕಿತ್ಸೆ ಇಲ್ಲದೆ ತಂತಾನೇ ಹೊರಟು ಹೋಗುತ್ತೆ. ತಾಮ್ರ ನಮ್ಮ ದೇಹಕ್ಕೆ ಅತ್ಯಲ್ಪ ಪ್ರಮಾಣದಲ್ಲಿ ಬೇಕಾಗಿದ್ದು ಅದು ನಮ್ಮ ಆಹಾರದ ಮೂಲಕವೇ ನಮ್ಮ ದೇಹಕ್ಕೆ ಸೇರುತ್ತದೆ. ಇದಕ್ಕಾಗಿ ವಿಶೇಷವಾಗಿ ದೇಹಕ್ಕೆ ಸೇರಿಸುವ ಅವಶ್ಯಕತೆ ಇರುವುದಿಲ್ಲ.


ಈ ವಿಷಯ ಓದಿದ ಮೇಲೆ ತಾಮ್ಬ್ರ ದಂತೆ ಚಿನ್ನವು ಕೂಡ ಒಂದು ಲೋಹವೇ,  ಅದೂ ಕೂಡ ನಮ್ಮ ಮಕ್ಕಳ ದೇಹದಲ್ಲಿ ಹೆಚ್ಚಾಗೆ ಸೇರಿ ಬೇರೆ ಏನೋ ದುಷ್ಪರಿಣಾಮಗಳಾದರೆ ಅನ್ನೋ ಗೊಂದಲ ಒಂದೆಡೆ ,,ಅದು ಮಕ್ಕಳ ದೇಹಕ್ಕೆ ಒಳ್ಳೇದೆ ಮಾಡುತ್ತಾದರೆ ನಾನು ನನ್ನ ಮಕ್ಕಳಿಗೆ ಹಾಕಿಸದೆ  ಸುಮ್ಮನೆ ಇರೋಕು ನನ್ನ ಕೈಲಿ ಆಗ್ತಿಲ್ಲ ,,,,ಈ ಗೊಂದಲದಲ್ಲಿ  ನಾನಿದಿನಿ ಯಾರಿಗಾದರೂ ಇದರ ಬಗ್ಗೆ ಪೂರ್ಣ ಮಾಹಿತಿ ಇದ್ರೆ ,,ಇದರ ಬಗ್ಗೆ ಆಗಿರುವ ರಿಸರ್ಚ್ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿ ಇದ್ರೆ  ದಯವಿಟ್ಟು ತಿಳಿಸಿ.



ಹಿಂದಿನ ಕಾಲದಲ್ಲಿ ಜನರಿಗೆ ಅರಿವಿಲ್ಲದೆ ಮಕ್ಕಳ ದೇಹಕ್ಕೆ ತಾಮ್ರ ಸೇರಿಸಿ ತಮ್ಮ ಮಕ್ಕಳ ಸಾವಿಗೆ ತಾವೇ ಕಾರಣರಾಗಿದ್ದರು.  ನಾವು ಕೂಡ ಮಾದ್ಯಮಗಳ ಮೂಲಕ ಸಿಗುವ ಬಿಟ್ಟಿ  ಪ್ರಚಾರಗಳ ಮೊರೆ ಹೋಗಿ ನಮ್ಮ ಮಕ್ಕಳಿಗೆ ಯಾವುದನ್ನೂ ಕುರುಡಾಗಿ ನಂಬದೆ, ಯೋಚಿಸದೆ, ಹಾಕಿಸುವುದು ಬೇಡ ಅನ್ನೋದು ನನ್ನ ನಿರ್ಧಾರ. ಅಂದು ತಾಮ್ರ ಇಂದು ಚಿನ್ನ ಇನ್ನು ನನ್ನಲ್ಲಿ ಚಿನ್ನದ ಬಗ್ಗೆ ಭಾರಿ ಅನುಮಾನಗಳಿವೆ ಇದನ್ನು ಹೇಗೆ ಸರಿಪಡಿಸಿಕೊಳ್ಳಲಿ?. ಸ್ವರ್ಣ ಬಿಂದು ಪ್ರಾಶನ ಒಳ್ಳೆಯದೇ ಆಗಿದ್ದಲ್ಲಿ  ನನ್ನ ಮಕ್ಕಳಿಗೆ ಹಾಕಿಸಲೇಬೇಕು ಅನ್ನೋ ಅಸೆ... ,,ಅದು ದೇಹಕ್ಕೆ ಜಾಸ್ತಿ  ಆಗಿ ಬೇರೆ ಅಪಾಯಕಾರಿ ರಿಯಾಕ್ಷನ್ ಆದ್ರೆ??? ಅದನ್ನು ಹಾಕಿಸಿ ಹೀಗಾಯ್ತಲ್ಲ ಅನ್ನೋ ಹಾಗೆ ಆಗಬಾರದು. ಈ ನನ್ನ ಗೊಂದಲ ಹೋಗಲಾಡಿಸಿಕೊಳ್ಳುವುದು  ಹೇಗೆ????????? 

4 comments:

  1. This comment has been removed by a blog administrator.

    ReplyDelete
  2. * Ayurveda does not know about the germ theory of causation of disease.

    * Ayurveda has no use for imaging techniques such as X ray, MRI etc.
    *Ayurveda seems to think it's necessary for human beings to consume gold.

    * According to modern science gold is a metal that's toxic.

    * Ayurveda does not have evidence to show gold bhasma has either the efficacy of safety for use by oral route in children.
    * The basis for understanding the causation of disease is a concept of humours such as vatha,pitta and kapha
    * Such a concept of humours was abandoned long back by scientific and evidence based modern medicine.
    * Gullible Indian people alone fall for these charlatans whose aim is to make money.


    ReplyDelete
  3. ಹಣ ಇರುತ್ತದೆ ರೀಸರ್ಚ ಮಾಡುತ್ತಾರೆ, ನಮ್ಮ ಬಳಿ ಹಣವಿಲ್ಲ ಅದಕ್ಕೆ ಪುರಾವೆ ಇಲ್ಲ ಎಂದರೆ ಸರಿಯಲ್ಲ.ಅಷ್ಟು ಹಣ, ಸಮಯ, ಪ್ರೌಡಿಮೆ ಖರ್ಚು ಮಾಡಿ ಲಭಿಸುವುದೇನು ಎಂಬುದು ಅತಿಮುಖ್ಯ.ಈಗ ಲಭ್ಯವಿರುವ ವೈಜ್ಞಾನಿಕ ಜ್ಞಾನ ದನ್ವಯ ಸಂಶೋಧನೆ ಕೈಗೊಳ್ಳಲು ಏನಾದರೂ ಆಧಾರ ಇದೆಯೇ ? ಸ್ವರ್ಣಬಿಂದು ಔಷಧದಲ್ಲಿ ಅಂಥದ್ದೇನೂ ಇದ್ದಂತಿಲ್ಲ.

    ReplyDelete
  4. ಆದರೆ ಆದುನಿಕ ವೈದ್ಯಕೀಯದನ್ವಯ ನಿಮ್ಮ ಮಕ್ಕಳಿಗೆ ಸ್ವರ್ಣಬಿಂದುವಿಗಿಂತ ನಿಶ್ಚಯವಾಗಿಯೂ ಉತ್ತಮ ಜೀವನ ನೀಡಬಲ್ಲ ವಿಚಾರವೊಂದಿದೆ. ಅದೆಂದರೆ ಎಂಡುರೆನ್ಸ ವ್ಯಾಯಾಮ ನಿಯಮಿತವಾಗಿ ಮಾಡುವುದು ಅದರಿಂದ ಬುದ್ಧಿಶಕ್ತಿಯು ಆರೊಗ್ಯವೂ ಲಭಿಸುತ್ತದೆ.

    ReplyDelete